6.09.2010

ಇಮಿಗ್ರೇಷನ್ ಅಧಿಕಾರಿಗಳಿಂದ ಬುಡಕಟ್ಟು ಜನಾಂಗದ ಯುವತಿಗೆ ಅವಮಾನ

ಬೆಂಗಳೂರು: ಹಿಂದಿ ಭಾಷೆಯನ್ನು ಮಾತನಾಡುವ ಶೈಲಿಯು ವಿಭಿನ್ನವಾಗಿದೆ ಎನ್ನವ ಒಂದೇ ಕಾರಣಕ್ಕಾಗಿ ಛತ್ತೀಸ್ಗಡದ ಅಸ್ತರಾದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅವಮಾನಗೊಳಿಸಿದ ಘಟನೆಯು ಮಂಗಳವಾರ (8ನೇ ಜೂನ್, 2010) ಬೆಳಗಿನ ಜಾವ ನಡೆದಿದೆ.

ಫಿನ್ಲೆಂಡ್ ದೇಶದ ಹೆಲ್ಸಿಂಕಿಯಲ್ಲಿ ಜೂನ್ 10ರಂದು ನಡೆಯಲಿರುವ "ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕಾಗಿ ವಿಶೇಷ ಭಾಷಣಕಾರ್ತಿಯಾಗಿ ಆಹ್ವಾನಿತರಾದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರಿನಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಇಲ್ಲ ಸಲ್ಲದ ಅವಹೇಳನಕಾರಿ ಪ್ರಶ್ನೆಗಳನ್ನು ಕೇಳಿ ಅವಮಾನ ಕೂಡ ಮಾಡಿದರು.

ಅಷ್ಟೇ ಅಲ್ಲ "ನಿನ್ನ ಹಿಂದಿ ನಮಗೆ ಅರ್ಥ ಆಗುವುದಿಲ್ಲ; ನೀನು ವಿದೇಶಕ್ಕೆ ಹೋಗುವುದಾದರೆ ನವದೆಹಲಿಯಿಂದಲೇ ಪ್ರಯಾಣ ಮಾಡು. ನವದೆಹಲಿಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳಿಗೆ ನಿನ್ನ ಹಿಂದಿ ಅರ್ಥ ಆಗಬಹುದು" ಎಂದು ಕೂಡ ಸುಮನ್ ಕೊರಟ್ಟಿ ಅವರನ್ನು ಇಮಿಗ್ರೇಷನ್ ಅಧಿಕಾರಿಗಳು ವ್ಯಂಗ್ಯ ಮಾಡಿದರು.

ಸುಮನ್ ಕೊರಟ್ಟಿ ಅವರ ಜೊತೆಗೆ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಹೆಲ್ಸಿಂಕಿಗೆ ಹೊರಟಿದ್ದ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್ ಅವರು ಮಧ್ಯ ಪ್ರವೇಶಿಸಿ ವಿವರಣೆ ನೀಡಲು ಯತ್ನಿಸಿದಾಗ "ಅವಳೇನು ನಿಮ್ಮ ಹೆಂಡತಿಯೇ...?" ಎಂದು ಅವಹೇಳನಕಾರಿಯಾದ ರೀತಿಯಲ್ಲಿ ವ್ಯಂಗ್ಯ ಮಾಡಿ ನಕ್ಕರು.

ಹೆಲ್ಸಿಂಕಿಯಲ್ಲಿ ನಡೆಯಲಿರುವ ವಿಚಾರ ಸಂಕಿರಣದ ಅಧಿಕೃತ ಆಹ್ವಾನ ಪತ್ರಿಕೆ ಸೇರಿದಂತೆ ಪ್ರಯಾಣಕ್ಕೆ ಅಗತ್ಯವಾಗಿದ್ದ ಎಲ್ಲ ದಾಖಲೆಗಳನ್ನು ಇಮಿಗ್ರೇಷನ್ ಅಧಿಕಾರಿಗಳಿಗೆ ತೋರಿಸಿ, ವಿವರಿಸಿದರೂ ಕೊನೆಗೂ ಅವರು ಒಪ್ಪಲಿಲ್ಲ. ಆದ್ದರಿಂದ ಮನನೊಂದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರು ವಿಧಿ ಇಲ್ಲದೆ ರಾತ್ರೋರಾತ್ರಿ ನವದೆಹಲಿಗೆ ತೆರಳಿ, ಅಲ್ಲಿಂದ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ಘಟನೆ ವಿವರ:

ಸುಮನ್ ಕೊರಟ್ಟಿ ಅವರು ಛತ್ತೀಸ್ಗಡದ ಅಸ್ತರಾದ ಬುಡಕಟ್ಟು ಜನಾಂಗದ ಯುವತಿ. ಸರ್ಕಾರವು ಅಭಿವೃದ್ಧಿಯ ಕಾರ್ಯಗಳ ಹೆಸರಿನಲ್ಲಿ ನಡೆಸಿದ ಮೂಲ ನಿವಾಸಿಗಳ ಎತ್ತಂಗಡಿ ಕಾರ್ಯಾಚರಣೆಯಲ್ಲಿ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ಸ್ಥಳಾಂತರಗೊಂಡ ಆದಿವಾಸಿ ಕುಟುಂಬದವಳು. ಅವಳು ಮಾತನಾಡುವ ಹಿಂದಿ ಭಾಷೆಯ ಶೈಲಿಯು ಸ್ವಲ್ಪ ಭಿನ್ನವಾಗಿದೆ. ಆದರೆ ಆದಿವಾಸಿಗಳ ಹೋರಾಟದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.

ಅವರಿಗೆ ಹೆಲ್ಸಿಂಕಿಯಲ್ಲಿ 10ನೇ ಜೂನ್ 2010ರಂದು ನಡೆಯುವ ""ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ವಿಶೇಷ ಭಾಷಣಕಾರರಾಗಿ ಆಹ್ವಾನ ಬಂದಿತ್ತು. ಸುಮನ್ ಕೊರಟ್ಟಿ ಅವರ ಹಿಂದಿ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಆಹ್ವಾನಿತರಾಗಿದ್ದು ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್. ಆದ್ದರಿಂದಲೇ ಇವರಿಬ್ಬರೂ ಬೆಂಗಳೂರಿನಿಂದ ಒಟ್ಟಿಗೇ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಹೋಗಲು ಪ್ರಯಾಣದ ಟಿಕೆಟ್ ವ್ಯವಸ್ಥೆ ಮಾಡಲಾಗಿತ್ತು.

ಸುಮನ್ ಕೊರಟ್ಟಿ ಹಾಗೂ ವಿ.ಎಸ್. ರಾಯ್ ಡೇವಿಡ್ ಅವರು ಮಂಗಳವಾರ (8ನೇ ಜೂನ್, 2010) ಬೆಳಗಿನ ಜಾವ 4.15ಕ್ಕೆ ಫ್ಲೈಟ್ ಸಂಖ್ಯೆ: ಇ.ಕೆ.569 (ಎಮಿರೇಟ್ಸ್ ವಿಮಾನ) ಮೂಲಕ ದುಬೈಗೆ ಹೊರಡಬೇಕಾಗಿತ್ತು. ಅದಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿ ಬೋರ್ಡಿಂಗ್ ಪಾಸ್ ಪಡೆದು ಕೂಡ ಆಗಿತ್ತು. ಆದರೆ ಇಮಿಗ್ರೇಷನ್ ಅಧಿಕಾರಿಗಳು ಸುಮನ್ ಕೊರಟ್ಟಿ ಅವರಿಗೆ ವಿಮಾನ ಏರಲು ಅವಕಾಶ ನೀಡಲಿಲ್ಲ. ಅಷ್ಟೇ ಅಲ್ಲ ಅವಹೇಳನಕಾರಿಯಾದ ರೀತಿಯಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ, ವ್ಯಂಗ್ಯ ಮಾಡಿದರು.

ಆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ವಿವರಿಸಿ ಹೇಳಲು ಪ್ರಯತ್ನ ಮಾಡಿದ ವಿ.ಎಸ್.ರಾಯ್ ಡೇವಿಡ್ ಅವರನ್ನೂ ಇಮಿಗ್ರೇಷನ್ ಅಧಿಕಾರಿಗಳು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದರು. ತಾವು ಸುಮನ್ ಕೊರಟ್ಟಿ ಅವರ ಭಾಷಣದ ಇಂಗ್ಲಿಷ್ ಅನುವಾದಕರಾಗಿ ಹೆಲ್ಸಿಂಕಿಯಲ್ಲಿ ನಡೆಯುವ "ಡಿಸ್ ಪ್ಲೇಸ್ ಮೆಂಟ್ " ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಜೊತೆಯಾಗಿ ಹೋಗುತ್ತಿರುವುದಾಗಿ ಹೇಳಿದಾಗಲೂ ಕೂಡ ಪ್ರಯೋಜನ ಆಗಲಿಲ್ಲ. ಆಗಲೂ ಇಮಿಗ್ರೇಷನ್ ಅಧಿಕಾರಿಗಳು ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದರು. "ನೀವೇಕೆ ಅವಳ ಜೊತೆಗೆ ಹೋಗಬೇಕು...; ನಿಮಗೂ ಅವಳಿಗೂ..." ಎಂದೆಲ್ಲ ಕೆಟ್ಟದಾದ ರೀತಿಯಲ್ಲಿ ಮಾತನಾಡಿದರು.

ಅಗತ್ಯ ದಾಖಲೆಗಳನ್ನು ನೀಡಿ, ಸ್ಪಷ್ಟವಾದ ವಿವರಣೆ ಕೊಟ್ಟರೂ ಇಮಿಗ್ರೇಷನ್ ಅಧಿಕಾರಿಗಳು ಸುಮನ್ ಕೊರಟ್ಟಿ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲು ಅವಕಾಶ ನೀಡಲಿಲ್ಲ. ಆದ್ದರಿಂದ ಛತ್ತೀಸ್ಗಡದ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅನಿವಾರ್ಯವಾಗಿ ರಾತ್ರೋರಾತ್ರಿ ನವದೆಹಲಿಗೆ ಹೋಗಿ, ಅಲ್ಲಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ವಿಚಿತ್ರವೆಂದರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅಷ್ಟೆಲ್ಲಾ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ಆದರೆ ಅದೇ ನವದೆಹಲಿಯಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಒಂದು ಮರು ಪ್ರಶ್ನೆಯನ್ನು ಕೂಡ ಕೇಳದೆಯೇ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ನವದೆಹಲಿಯಿಂದ ಸುಮನ್ ಏಕಾಂಗಿ ಪ್ರಯಾಣ:

ಮೊಟ್ಟ ಮೊದಲ ಬಾರಿಗೆ ವಿದೇಶ ಪ್ರಯಾಣಕ್ಕೆ ಹೊರಟ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿಗೆ ಭಯ. ಮೊದಲು ನಿಗದಿ ಮಾಡಿದಂತೆ ಬೆಂಗಳೂರಿನಿಂದ ಪ್ರಯಾಣ ಮಾಡುವುದಾಗಿದ್ದರೆ ಜೊತೆಗೆ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ಹಾಗೂ ನ್ಯಾಷನಲ್ ಆದಿವಾಸಿ ಅಲೈನ್ಸ್ ಸಂಚಾಲಕರಾದ ವಿ.ಎಸ್. ರಾಯ್ ಡೇವಿಡ್ ಜೊತೆಗೆ ಇರುತ್ತಿದ್ದರು. ಹಾಗೆ ಆಗಿದ್ದರೆ, ಪ್ರಯಾಣ ಕಾಲದಲ್ಲಿ ಇಂಗ್ಲಿಷ್ ಭಾಷೆಯ ತೊಡಕೂ ಪ್ರಯಾಣ ಕಾಲದಲ್ಲಿ ಕಾಡುತ್ತಿರಲಿಲ್ಲ. ನೆರವಿಗೆ ರಾಯ್ ಡೇವಿಡ್ ಇರುತ್ತಿದ್ದರು.

ಆದರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಇಲ್ಲಿಂದ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡದ ಕಾರಣ ಸುಮನ್ ಕೊರಟ್ಟಿ ಅವರು ನವದೆಹಲಿಗೆ ಹೋಗಿ ಅಲ್ಲಿಂದ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಸುಮನ್ ಅವರಿಗೆ ಏಕಾಂಗಿಯಾಗಿ ಪ್ರಯಾಣ ಮಾಡುವ ಭಯವೂ ಕಾಡಿತು.

ಸುಮನ್ ಭಯದ ನಡುವೆ ಏಕಾಂಗಿಯಾಗಿ ವಿದೇಶ ಪ್ರಯಾಣ ಮಾಡಬೇಕಾಗಿದ್ದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳ ಸಲ್ಲದೊಂದು ನಿರ್ಣಯದ ಫಲ. ಕನ್ನಡ ಗೊತ್ತಿಲ್ಲ ಹಾಗೂ ಹಿಂದಿ ಭಾಷೆಯ ಶೈಲಿಯೂ ಬೇರೆಯಾಗಿದೆ ಎನ್ನುವ ಒಂದೇ ಕಾರಣಕ್ಕಾಗಿ ಅವಳಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಲು ಅವಕಾಶ ನೀಡದಿದ್ದರ ಪರಿಣಾಮವಾಗಿ ಸುಮನ್ ಕೊರಟ್ಟಿ ಅವರು ರಾತ್ರೋರಾತ್ರಿ ಬೆಂಗಳೂರಿನಿಂದ ನವದೆಹಲಿಗೆ ಹೋಗಿ ಅಲ್ಲಿಂದ ಹೊಸ ಟಿಕೆಟ್ ವ್ಯವಸ್ಥೆ ಮಾಡಿಕೊಂಡು ಹೆಲ್ಸಿಂಕಿಗೆ ಪ್ರಯಾಣ ಮಾಡಬೇಕಾಯಿತು.

ಘಟನೆ ಬಗ್ಗೆ ಕೂರ್ಗ್ ಆರ್ಗನೈಜೇಷನ್ ಫಾರ್ ರೂರಲ್ ಡೆವಲಪ್ ಮೆಂಟ್ (ಸಿ.ಓ.ಆರ್.ಡಿ.) ನಿರ್ದೇಶಕ ವಿ.ಎಸ್. ರಾಯ್ ಡೇವಿಡ್ ಪ್ರತಿಕ್ರಿಯೆ:

"ಬುಡಕಟ್ಟು ಜನಾಂಗದವರನ್ನು ನಮ್ಮ ನಾಗರಿಕ ಸಮಾಜವು ಹೇಗೆ ಕಾಣುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬುಡಕಟ್ಟು ಜನಾಂಗದವರೂ ಈ ದೇಶದ ನಾಗರಿಕರು; ಅವರಿಗೂ ದೇಶದ ಯಾವುದೇ ಭಾಗದಿಂದ ಪ್ರಯಾಣ ಮಾಡುವ ಹಕ್ಕಿದೆ. ಆದರೆ ಬುಡಕಟ್ಟು ಜನಾಂಗದ ಯುವತಿ ಸುಮನ್ ಕೊರಟ್ಟಿ ಅವರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಅವಹೇಳನ ಮಾಡಿದ ರೀತಿಯು ಖಂಡಿತವಾಗಿಯೂ ನೋವುಂಟು ಮಾಡುವಂಥದು."

"ಕನ್ನಡ ಬರುವುದಿಲ್ಲ, ಹಿಂದಿ ಮಾತನಾಡುವ ಶೈಲಿ ಬೇರೆಯಾಗಿದೆ ಎಂದರೆ ಅನುಮಾನದಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ? ಬುಡಕಟ್ಟು ಜನಾಂಗದ ಈ ಯುವತಿ (ಸುಮನ್ ಕೊರಟ್ಟಿ) ದೇಶದ ಪ್ರತಿನಿಧಿಯಾಗಿ ಹೆಲ್ಸಿಂಕಿಯಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ ವಿಶೇಷ ಭಾಷಣಕಾರ್ತಿಯಾಗಿ ಆಹ್ವಾನಿತಳಾದವಳು. ಅದಕ್ಕಾಗಿ ಬಂದ ಆಹ್ವಾನ, ಭಾಷಣದ ಪ್ರತಿ, ಪಾಸ್ ಪೋರ್ಟ್, ವೀಸಾ... ಸೇರಿದಂತೆ ಎಲ್ಲ ದಾಖಲೆಗಳನ್ನು ಇಮಿಗ್ರೇಷನ್ ಅಧಿಕಾರಿಗಳ ಮುಂದೆ ಇಟ್ಟರೂ ಅದನ್ನು ಕಡೆಗಣಿಸಿ; ಕೇವಲ ಅವಳು ಮಾತನಾಡುವ ಹಿಂದಿ ಭಾಷೆಯ ಶೈಲಿಯು ವಿಭಿನ್ನವಾಗಿದೆ ಎನ್ನುವ ಒಂದೇ ಕಾರಣಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹತ್ತಲು ಅವಕಾಶ ನೀಡದಿರುವುದು ವಿಷಾದಕರ ಸಂಗತಿ."

"ಬುಡಕಟ್ಟು ಜನಾಂಗದವರು ಎಂದಾಕ್ಷಣ ಅವರನ್ನು ಅನುಮಾನದಿಂದ ನೋಡುವ ಜಾಯಮಾನವನ್ನು ಇಮಿಗ್ರೇಷನ್ ಅಧಿಕಾರಿಗಳು ಬದಲಿಸಿಕೊಳ್ಳಬೇಕು. ಫಿನ್ಲೆಂಡ್ ದೇಶದ ದೊಡ್ಡದೊಂದು ಸಮಾಜ ಸೇವಾ ಸಂಘಟನೆಯು ವಿಶೇಷವಾಗಿ ಆಹ್ವಾನ ನೀಡಿ, ಭಾಷಣ ಮಾಡುವುದಕ್ಕೆ ಸುಮನ್ ಕೊರಟ್ಟಿಗೆ ಆಹ್ವಾನ ನೀಡಿದೆ. ವಿದೇಶಿಯರು ಗೌರವಯುತವಾಗಿ ಆಹ್ವಾನಿಸಿದಂಥ ಬುಡಕಟ್ಟು ಜನಾಂಗದ ಈ ಯುವತಿಗೆ ಸ್ವದೇಶದಲ್ಲಿಯೇ ಅವಮಾನವಾಗುವ ರೀತಿಯಲ್ಲಿ ಇಮಿಗ್ರೇಷನ್ ಅಧಿಕಾರಿಗಳು ನಡೆದುಕೊಂಡಿದ್ದು ನನ್ನ ಅಸಮಾಧಾನಕ್ಕೆ ಕಾರಣ"

"ಛತ್ತೀಸ್ಗಡದ ಅಸ್ತರಾ ಪ್ರದೇಶದ ವಾಸಿಯಾದ ಸುಮನ್ ಕೊರಟ್ಟಿ ಅವರಿಗೆ ವಿದೇಶ ಪ್ರಯಾಣ ಮೊಟ್ಟ ಮೊದಲ ಅನುಭವ. ಆದ್ದರಿಂದ ಸಹಜವಾಗಿಯೇ ಪ್ರವಾಸದ ಭಯ. ಆದ್ದರಿಂದ ಭಾಷಣದ ಇಂಗ್ಲಿಷ್ ಅನುವಾದಕನಾಗಿ ಅದೇ ವಿಚಾರ ಸಂಕಿರಣಕ್ಕೆ ಆಹ್ವಾನಿತನಾದ ನನ್ನ ಜೊತೆಗೆ ಕರೆದುಕೊಂಡು ಹೆಲ್ಸಿಂಕಿಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿಯೇ ಬೆಂಗಳೂರಿನಿಂದಲೇ ದುಬೈ ಹಾಗೂ ಫ್ರಾಂಕ್ ಫರ್ಟ್ ಮಾರ್ಗವಾಗಿ ಹೆಲ್ಸಿಂಕಿಗೆ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳ ವರ್ತನೆಯಿಂದಾಗಿ ಎಲ್ಲ ಪ್ರಯಾಣ ವ್ಯವಸ್ಥೆಯನ್ನು ಬದಲಿಸಬೇಕಾಯಿತು."

"ಸುಮನ್ ಕೊರಟ್ಟಿ ಅವರು ಛತ್ತೀಸ್ಗಡದವರು ಎನ್ನುವ ಕಾರಣಕ್ಕಾಗಿ ಅವರನ್ನು ಅಲ್ಲಿಗೆ ಸಮೀಪದ ನವದೆಹಲಿಯಿಂದಲೇ ಪ್ರಯಾಣ ಮಾಡುವಂತೆ ತಾಕೀತು ಮಾಡಿದ ಇಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಈ ಬುಡಕಟ್ಟು ಜನಾಂಗದ ಯುವತಿಯು ಭಾರತದ ಪ್ರಜೆಯಾಗಿ ಎಲ್ಲಿಯಿಂದಾದರೂ ಪ್ರಯಾಣ ಮಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ಉನ್ನತ ಹುದ್ದೆಯಲ್ಲಿ ಇರುವಂಥವರು ಎಲ್ಲಿಯಿಂದಾದರೂ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡುವ ಇದೇ ಇಮಿಗ್ರೇಷನ್ ಅಧಿಕಾರಿಗಳು; ಈ ಬುಡಕಟ್ಟು ಜನಾಂಗದ ಯುವತಿಯನ್ನು ತಡೆದಿದ್ದು ಯಾಕೆ? ಎನ್ನುವುದು ನನ್ನ ಪ್ರಶ್ನೆ. ಇದಕ್ಕೆ ಉತ್ತರ ನೀಡುವವರು ಯಾರು? ಇಮಿಗ್ರೇಷನ್ ಅಧಿಕಾರಿಗಳು ತಮ್ಮ ನಿರ್ಣಯವೇ ಕೊನೆ ಎನ್ನುವಂತೆ ವರ್ತಿಸಿದ್ದಾರೆ. ಆದರೆ ಇಂಥದೊಂದು ಸಲ್ಲದ ಕಟ್ಟಳೆಯನ್ನು ಹೇರಿದ್ದು ಎಷ್ಟರ ಮಟ್ಟಿಗೆ ಸರಿ?."

"ಬುಡಕಟ್ಟು ಜನಾಂಗದವರಿಗೆ ಸ್ವದೇಶದಲ್ಲಿಯೇ ಹೀಗೆ ಅವಮಾನ ಆಗುವ ರೀತಿಯ ಘಟನೆಯು ನಡೆದಿದ್ದು ಆಘಾತಕಾರಿ. ಅಭಿವೃದ್ಧಿಯ ಹೆಸರಿನಲ್ಲಿ ಈ ಬುಡಕಟ್ಟು ಜನಾಂಗದವರನ್ನು ಅವರ ಮೂಲ ನೆಲೆಯಿಂದ ಒತ್ತಾಯಪೂರ್ವಕವಾಗಿ ಓಡಿಸಿದ್ದು ಅಲ್ಲದೇ; ಅವರು ದೇಶದಲ್ಲಿಯೇ ಸ್ವಚ್ಛಂದವಾಗಿ ಓಡಾಡಲು ಕೂಡ ತಡೆದು ಸ್ವಾತಂತ್ರ್ಯ ಹರಣ ಮಾಡುತ್ತಿರುವುದು ಯ್ಯಾವ ಕಾನೂನು- ಕಟ್ಟಳೆ? ಮತ್ತೆ ಇಂಥ ಘಟನೆಗಳು ನಡೆಯದಂತೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎನ್ನುವುದು ನನ್ನ ವಿನಂತಿ."

"ಜಿ.ಎನ್.ಎಸ್" ಯಾಮಿನಿ ಫೌಂಡೇಷನ್ ಕಾರ್ಯದರ್ಶಿ ಶೋಭಾ ಎಂ. ಲೋಲನಾಥ್ ಪ್ರತಿಕ್ರಿಯೆ:

"ಸುಮನ್ ಕೊರಟ್ಟಿ ಒಬ್ಬಳು ಬುಡಕಟ್ಟು ಜನಾಂಗದವಳು; ಅವಳ ಭಾಷೆಯ ಶೈಲಿ ಬೇರೆ. ಹಾಗೆ ಎನ್ನುವ ಕಾರಣಕ್ಕೆ ಅವಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡುವುದಕ್ಕೆ ಅವಕಾಶ ನೀಡದ ಇಮಿಗ್ರೇಷನ್ ಅಧಿಕಾರಿಗಳ ವರ್ತನೆಯು ಆಕ್ಷೇಪಾರ್ಹ."

"ಭಾರತದಲ್ಲಿ ಒಂದೊಂದು ಭಾಗದವರು ಮಾತನಾಡುವ ರೀತಿ ಹಾಗೂ ಶೈಲಿ ಭಿನ್ನವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅವರನ್ನು ದೇಶದಲ್ಲಿಯೇ ಬೇರೆ ಬೇರೆ ಪ್ರಜೆಗಳು ಎನ್ನುವಂತೆ ವಿಂಗಡನೆ ಮಾಡಲಾಗುತ್ತದೆಯೇ? ಉತ್ತರ ಭಾರತದವರು ದಕ್ಷಿಣ ಭಾರತದಲ್ಲಿನ ಹಾಗೂ ದಕ್ಷಿಣ ಭಾರತದವರು ಉತ್ತರ ಭಾರತದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಪ್ರಯಾಣ ಮಾಡದಂತೆ ತಡೆದರೆ ಅದೆಂಥ ದುರಂತ! ವೈಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಂಥ ಘಟನೆ ಇದಾಗುತ್ತದೆ."